ಪುತ್ತೂರು : ವಾಹನದಲ್ಲಿ ತಯಾರಿಕಾ ದೋಷ ; ಕಂಪನಿ ವಿರುದ್ಧ ಕೋರ್ಟಿಗೆ ಹೋದ ಪುತ್ತೂರಿನ ಗ್ರಾಹಕನಿಗೆ ಜಯ.!ಸಾಲದ ಬಡ್ಡಿ ಸಮೇತ ವಾಹನದ ಬಾಬ್ತು ತೆರಲು ಗ್ರಾಹಕರ ಕೋರ್ಟ್ ಆದೇಶ.
ಮಂಗಳೂರು : ಹೊಸತಾಗಿ ಖರೀದಿಸಿದ ವಾಹನದಲ್ಲಿ ಪದೇ ಪದೇ ಸಮಸ್ಯೆಗಳು ಕಂಡುಬಂದ ಕಾರಣ ಗ್ರಾಹಕರೊಬ್ಬರು ವಾಹನ ಕಂಪನಿಯ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದಲ್ಲದೆ, ಪ್ರಕರಣವನ್ನು ಗೆದ್ದು ವಾಹನದ ಬಾಬು ಹಣವನ್ನು ಬಡ್ಡಿ ಸಮೇತ ಕೊಡಿಸುವಂತೆ ತೀರ್ಪು ಪಡೆದಿದ್ದಾರೆ.
ಅಶೋಕ್ ಲೇಲ್ಯಾಂಡ್ ಕಂಪನಿಯ ಬಡಾ ದೋಸ್ತ್ ವಾಹನವನ್ನು ಪುತ್ತೂರು ತಾಲೂಕಿನ ಶಾಂತಿಗೋಡು ನಿವಾಸಿ ಪದ್ಮನಾಭ ಪ್ರಭು ಎಂಬವರು 2021ರಲ್ಲಿ ಪುತ್ತೂರಿನ ಕಂಪನಿ ಶೋರೂಮಿನಿಂದ ಖರೀದಿಸಿದ್ದರು. ವಾಹನ ಖರೀದಿಸಿದ ಮೊದಲ ದಿನವೇ ಸಮಸ್ಯೆ ಕಂಡುಬಂದಿತ್ತು. ತರಕಾರಿ ಖರೀದಿಗಾಗಿ ಮುಳ್ಳೇರಿಯಾಕ್ಕೆ ಹೋಗಿದ್ದಾಗ ಗೇರ್ ಜಾಮ್ ಆಗಿದ್ದು ರಿಪೇರಿಗೆ ಕರೆದರೆ ಕಂಪನಿ ಮೆಕ್ಯಾನಿಕ್ ಬಂದಿರಲಿಲ್ಲ. ಆನಂತರ, ಮೆಕ್ಯಾನಿಕ್ ಕರೆಸಿ ಶೋರೂಮಿನಲ್ಲಿಯೇ ಕೆಲಸ ಮಾಡಿಸಿದ್ದರು. ಇದರ ಬಳಿಕವೂ ಪದೇ ಪದೇ ಸೈಲೆನ್ಸರ್, ಸೆನ್ಸಾರ್ ಸಮಸ್ಯೆ ಗೇರ್ ಜಾಮ್, ಎಲ್ ಅಂಡ್ ಟಿ ಸಂಪರ್ಕದಲ್ಲಿ ಸಮಸ್ಯೆ ಕಾಣಿಸಿತ್ತು. ಬದಲಿ ವಾಹನ ಕೊಡುವಂತೆ ಕೇಳಿದರೂ, ಕಂಪನಿಯವರು ಕೊಟ್ಟಿರಲಿಲ್ಲ. ವಾಹನ ರಿಪೇರಿ ಸಂದರ್ಭದಲ್ಲಿಯೂ ಬದಲಿ ಬಿಡಿಭಾಗಗಳನ್ನೂ ಹೊಸತಾಗಿ ಹಾಕದೆ ಕಂಜೂಸ್ ಮಾಡಿದ್ದರು ಎಂದು ಗ್ರಾಹಕ ಪದ್ಮನಾಭ ಪ್ರಭು ಹೇಳುತ್ತಾರೆ.
ಇದರಿಂದ ಬೇಸತ್ತ ಪದ್ಮನಾಭ ಪ್ರಭು ವಕೀಲರ ಮೂಲಕ 2022ರ ಆಗಸ್ಟ್ ತಿಂಗಳಲ್ಲಿ ಮಂಗಳೂರಿನ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ವಾಹನ ಖರೀದಿಸಿದ ಒಂದು ವರ್ಷದ ಒಳಗೆ 45 ಬಾರಿ ರಿಪೇರಿಗೆ ಇಟ್ಟಿರುವ ವಿಚಾರವನ್ನು ಮುಂದಿಟ್ಟು ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು. ಸೆನ್ಸಾರ್ ಸಮಸ್ಯೆ ಪಿಕ್ ಅಪ್ ಇಲ್ಲದಿರುವುದು, ಗೇರ್ ಜಾಮ್ ಮತ್ತಿತರ ಸಮಸ್ಯೆಗಳನ್ನು ಹೇಳಿ ಕಂಪನಿಯ ನಿರ್ಲಕ್ಷ್ಯ ಧೋರಣೆಯನ್ನು ಪ್ರಶ್ನಿಸಿದ್ದರು.
ದೂರಿನಲ್ಲಿ ವಾಹನ ತಯಾರಿಕಾ ಸಂಸ್ಥೆಯಾದ ಅಶೋಕ ಲೇಲ್ಯಾಂಡ್ ಹಾಗೂ ಡೀಲರ್ ಗಳಾದ ಮಂಗಳೂರಿನ ಕಾಂಚನ ಆಟೋಮೋಟಿವ್ ಸಂಸ್ಥೆ ಮತ್ತು ಅದರ ಪುತ್ತೂರು ಶಾಖೆಗಳನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿತ್ತು. ದೂರುದಾರರು ಮತ್ತು ಪ್ರತಿವಾದಿಗಳ ಸಾಕ್ಷಿ ವಿಚಾರಣೆ ನಡೆಸಿದ ನ್ಯಾಯಾಲಯ, ಸದ್ರಿ ವಾಹನದಲ್ಲಿ ತಯಾರಿಕಾ ದೋಷ ಇದೆ ಎಂಬ ವಾದವನ್ನು ಎತ್ತಿ ಹಿಡಿದಿದೆ. ಇದರಂತೆ, ಅಶೋಕ ಲೇಲ್ಯಾಂಡ್ ಮತ್ತು ಕಾಂಚನ ಆಟೋಮೋಟಿವ್ ಸಂಸ್ಥೆಗಳು ವಾಹನದ ವೆಚ್ಚ 7.50 ಲಕ್ಷವನ್ನು 2022ರಿಂದ ಈವರೆಗಿನ ಅವಧಿಗೆ ಶೇಕಡಾ 6 ಬಡ್ಡಿದರದಲ್ಲಿ ಗ್ರಾಹಕರಿಗೆ ನೀಡುವಂತೆ ತಿಳಿಸಿದೆ.
ಇದಲ್ಲದೆ, ದೂರುದಾರರಿಗೆ ಆಗಿರುವ ಸೇವಾನ್ಯೂನತೆ, ಮಾನಸಿಕ ಕಿರುಕುಳ ರೂ. 25 ಸಾವಿರ ಹಾಗೂ ವ್ಯಾಜ್ಯ ವೆಚ್ಚವಾಗಿ ರೂ.10 ಸಾವಿರ ನೀಡುವಂತೆ ಆದೇಶ ನೀಡಿದೆ. ದೂರುದಾರರ ಪರವಾಗಿ ಪುತ್ತೂರಿನ ವಕೀಲರಾದ ಹರೀಶ್ ಕುಮಾರ್ ಬಳಕ್ಕ ದೀಪಕ್ ಬೊಳುವಾರು, ಭುವನೇಶ್ವರಿ ಎಂ., ರಕ್ಷಿತಾ ಬಂಗೇರ ವಾದಿಸಿದ್ದರು.