ದೇಶ
ಲೋಕ ಸಮರಕ್ಕೆ ಇಂದು ತೆರೆ: ಇಂದು 7ನೇ ಹಂತದ ಮತದಾನ.
ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಕೊನೆಯ ಏಳನೇ ಹಂತದ ಮತದಾನ ಶನಿವಾರ (ಜೂನ್ 1) ನಡೆಯಲಿದ್ದು, ಇದರೊಂದಿಗೆ ಸುದೀರ್ಘ ಚುನಾವಣಾ ಪ್ರಕ್ರಿಯೆಗೆ ತೆರೆ ಬೀಳಲಿದೆ.
ಕೇಂದ್ರಾಡಳಿತ ಪ್ರದೇಶ ಚಂಡೀಗಢ ಸೇರಿದಂತೆ 8 ರಾಜ್ಯಗಳ 57 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕಣದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕಂಗನಾ ರಣಾವತ್, ವಿಕ್ರಮಾದಿತ್ಯ ಸಿಂಗ್, ರವಿಶಂಕರ್ ಪ್ರಸಾದ್ ಸೇರಿದಂತೆ 904 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಸಂಜೆ ಮತದಾನ ಮುಗಿಯುತ್ತಿದ್ದಂತೆಯೇ ವಿವಿಧ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಗಳು ಹೊರ ಬೀಳಲಿವೆ. ಸಮೀಕ್ಷೆಗಳು ಏನೇ ಹೇಳಿದರೂ ಎಲ್ಲ ರಾಜಕೀಯ ಪಕ್ಷಗಳು ಜೂನ್ 4ರ ಫಲಿತಾಂಶಕ್ಕಾಗಿ ಕಾಯುತ್ತಿವೆ. ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಕಾಂಗ್ರೆಸ್ ಸೇರಿ ದಂತೆ ಪ್ರತಿಪಕ್ಷಗಳ ಐಎನ್ ಡಿಐಎ ಮೈತ್ರಿಕೂಟದ ನಡುವೆ ಯಾರು ಅಧಿಕಾರಕ್ಕೆ ಬರಲಿದ್ದಾರೆಂಬ ಕುತೂಹಲ ಹೆಚ್ಚಿದೆ.