ಸಾವು ಗೆದ್ದ ಕಾರ್ಮಿಕರು: 17 ದಿನದ ಬಳಿಕ ಸುರಂಗದಿಂದ ಹೊರಕ್ಕೆ, ಒಬ್ಬೊಬ್ಬರನ್ನು ಹೊರ ಕರೆತರುತ್ತಿರುವ NDRF.
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರ್ ಸುರಂಗದೊಳಗೆ ಸಿಲುಕಿ, ಕಳೆದ 17 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ರಕ್ಷಣೆಗಾಗಿ ಎದುರು ನೋಡುತ್ತಿದ್ದ 41 ಕಾರ್ಮಿಕರಲ್ಲಿ ಮೊದಲ ಹಂತದಲ್ಲಿ ಐವರು ಕಾರ್ಮಿಕರು ಕೊನೆಗೂ ಸುರಂಗದಿಂದ ಹೊರಗೆ ಬಂದಿದ್ದಾರೆ.
ಇನ್ನುಳಿದ ಕಾರ್ಮಿಕರನ್ನು ಒಬ್ಬೊಬ್ಬರಾಗಿ ಪೈಪ್ ಮೂಲಕ ಹೊರಗೆ ಕರೆತರಲಾಗುತ್ತಿದೆ.
ಮೊದಲ ಹಂತದಲ್ಲಿ ಹೊರಬಂದ ಐವರು ಕಾರ್ಮಿರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆಂದು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಕಾರ್ಮಿಕರ ರಕ್ಷಣೆಗೆ ಮೂರು ಎನ್ಡಿಆರ್ಎಫ್ ತಂಡಗಳು ಸುರಂಗದ ಒಳಗಡೆ ಪ್ರವೇಶಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಕಾರ್ಮಿಕರು ಹೊರ ಬರುತ್ತಿದ್ದಂತೆ ಸುರಂಗದ ಹೊರಗಡೆ ಜೈಕಾರಗಳು ಮೊಳಗಿದವು. ಎಲ್ಲ 41 ಕಾರ್ಮಿಕರನ್ನು ಹೊರಗೆ ಕರೆತರಲು ಸುಮಾರು 1 ಗಂಟೆ ತೆಗೆದುಕೊಳ್ಳುತ್ತದೆ ಎಂದು ರಕ್ಷಣಾ ಪಡೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸತತ 17 ದಿನಗಳ ಕಾಲ ಹಗಲು ರಾತ್ರಿ ಎನ್ನದೆ ನಿರಂತರವಾಗಿ ರಕ್ಷಣಾ ಕಾರ್ಯಾದಲ್ಲಿ ತೊಡಗಿದ ಎಲ್ಲ ರಕ್ಷಣಾ ಪಡೆಗಳ ಶ್ರಮಕ್ಕೆ ಇಂದು ಫಲ ಸಿಕ್ಕಿದೆ. 17 ದಿನಗಳಿಂದ ಕತ್ತಲೆ ಕೂಪದಲ್ಲಿ, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬೆಳಕಿಗಾಗಿ ಪರಿತಪಿಸುತ್ತಾ, ನೆಚ್ಚಿನ ದೇವರಲ್ಲಿ ಇನ್ನೊಂದು ಅವಕಾಶಕ್ಕಾಗಿ ಬೇಡಿಕೊಳ್ಳುತ್ತಿದ್ದ ಕಾರ್ಮಿಕರ ಬೇಡಿಕೆ ಫಲಿಸದೆ. ಅಲ್ಲದೆ, ಸುರಂಗದಲ್ಲಿ ತಮ್ಮ ಕುಟುಂಬದ ಸದಸ್ಯನೊಬ್ಬ ಸಿಲುಕಿಕೊಂಡು, ಸರಿಯಾದ ಊಟ, ನಿದ್ರೆ ಇಲ್ಲದೆ, ಪ್ರತಿಕ್ಷಣ ಸಾವಿನ ಜತೆ ಹೋರಾಡುತ್ತ ಇರುವುದನ್ನು ಕಂಡು ಮರುಗಿ, ಪ್ರತಿದಿನ ಅವರ ಬರುವಿಕೆಗಾಗಿ ದೇವರ ಬಳಿ ದಿನವೂ ಬೇಡಿಕೊಳ್ಳುತ್ತಿದ್ದ ಕುಟುಂಬದವರ ಪ್ರಾರ್ಥನೆಯೂ ಸಹ ಇಂದು ಫಲಿಸಿದೆ. ಸರ್ಕಾರದ ನೆರವಿಗೂ ಒಂದು ಬೆಲೆ ಬಂದಿದೆ.