ಪ್ರೇಯಸಿಗಾಗಿ ಮನೆಗಳ್ಳತನ: 8 ಲಕ್ಷ ಮೌಲ್ಯದ ಚಿನ್ನ ವಶಕ್ಕೆ.
ಬೆಂಗಳೂರು: ಪ್ರೇಯಸಿಗಾಗಿ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮನನ್ನ ಜಿಗಣಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಸರ್ಜಾಪುರದ ಚಿಕ್ಕದಾಸರಹಳ್ಳಿ ನಿವಾಸಿ ಲಕ್ಷ್ಮಣ್ ಅಲಿಯಾಸ್ ಗುನ್ನಿ ಬಂಧಿತ ಆರೋಪಿ. ಇತನಿಂದ 8 ಲಕ್ಷ ರೂಪಾಯಿ ಮೌಲ್ಯದ 101 ಗ್ರಾಂ ಚಿನ್ನಾಭರಣವನ್ನು ಜಫ್ತಿ ಮಾಡಲಾಗಿದೆ.
ಕೈಯಲ್ಲಿ ಕೆಲಸವಿಲ್ಲದಿದ್ದರು ಶೋಕಿ ಜೀವನ ರೂಡಿಸಿಕೊಂಡಿದ್ದ ಲಕ್ಷ್ಮಣ್, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಶೋಕಿ ಜೀವನ ರೂಢಿಸಿಕೊಂಡಿದ್ದ ಆಸಾಮಿ, ಪ್ರೇಯಸಿಯನ್ನು ಪ್ರವಾಸಿ ತಾಣಗಳಿಗೆ ಸುತ್ತಾಡಿಸಲು ಮನೆಗಳಿಗೆ ಕನ್ನ ಹಾಕುತ್ತಿದ್ದ. ಅದರಂತೆ ಜಿಗಣಿಯ ಗೋಪಾಲಸ್ವಾಮಿ ಎಂಬುವವರ ಮನೆಗೆ ಬೆಳ್ಳಂಬೆಳಗ್ಗೆ ಬಾಗಿಲು ಮುರಿದು ನುಗ್ಗಿ, ನಗನಾಣ್ಯವನ್ನು ದೋಚಿ ಪರಾರಿಯಾಗಿದ್ದನು.
ಜಿಗಣಿ, ಬನ್ನೇರುಘಟ್ಟ, ಅತ್ತಿಬೆಲೆ, ಸೂರ್ಯನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಇತನ ಮೇಲೆ ಕೇಸ್ ದಾಖಲಾಗಿತ್ತು. 23 ಮನೆಗಳವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ, ಹಲವು ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದ. ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕಳುಹಿಸಿದ್ದಾರೆ.