ಉಡುಪಿ : ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಮೇಲೆ ಹಲ್ಲೆಗೆ ಯತ್ನಿಸಿದ 11 ಮಂದಿಗೆ ನೋಟಿಸ್!!
ಉಡುಪಿ : ನ.12 ರಂದು ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಚೌಗಲೆಯ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ 11 ಮಂದಿಯ ಮೇಲೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಹಸೀನಾ (46), ಅಫ್ನಾನ್ (23), ಐನಾಜ್ (21) ಮತ್ತು ಅಸೀಮ್ (12) ಎಂಬವರನ್ನು ಪ್ರವೀಣ್ ಅರುಣ್ ಚೌಗಲೆ ಉಡುಪಿ ನಗರ ನೇಜಾರುವಿನ ಅವರ ಮನೆಯಲ್ಲಿ ಹತ್ಯೆ ಮಾಡಿದ್ದನು. ಆರೋಪಿ ಅಯ್ನಾಜ್ ಮೇಲಿನ ಪ್ರೀತಿ ಮತ್ತು ಹಣಕಾಸಿಗೆ ಸಂಬಂಧಿಸಿದ ವಿಚಾರಕ್ಕೆ ಈ ಘೋರ ಕೃತ್ಯ ಮಾಡಲು ಪ್ರೇರೇಪಿಸಿದೆ ಎಂದು ಹೇಳಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಪತ್ತೆ ಹಚ್ಚಿದ ನಂತರ ಪೊಲೀಸರು ನ.16ರಂದು ಸಂತ್ರಸ್ತರ ಮನೆಗೆ ಮಹಜರಿಗೆ ಕರೆ ತಂದಿದ್ದರು. ಈ ವೇಳೆ ಕೋಪಗೊಂಡ ಸ್ಥಳೀಯರು ಆತನ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ. ಪೊಲೀಸರು ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ನಂತರ ಉದ್ರಿಕ್ತ ಗುಂಪನ್ನು ಹತ್ತಿಕ್ಕಲು ಲಾಠಿ ಚಾರ್ಜ್ ಮಾಡಿದ್ದರು. ಇದೀಗ ಪೊಲೀಸರು ಕಸ್ಟಡಿಯಲ್ಲಿದ್ದ ಆರೋಪಿ ಮೇಲೆ ಹಲ್ಲೆಗೆ ಯತ್ನಿಸಿದ 11 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.