ವಿದೇಶದಲ್ಲಿ ಕುಳಿತುಕೊಂಡೇ ಸುಳ್ಯದ ವಿವಾಹಿತ ಮಹಿಳೆಗೆ “ತ್ರಿವಳಿ ತಲಾಖ್” ಕೊಟ್ಟ ಗಂಡ..!!
ಸುಳ್ಯ : ತ್ರಿವಳಿ ತಲಾಖ್ ನೀಡುವುದನ್ನು ದೇಶದಲ್ಲಿನಿಷೇಧಿಸಲಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿದ್ದ ಪತ್ನಿಗೆ ವಿದೇಶದಿಂದಲೇ ವಾಟ್ಸಾಪ್ ನಲ್ಲಿ ಮೂರು ಸಲ ತಲಾಖ್ ಎಂದು ಬರೆದು ಕಳಿಸಿ ಶಾಕ್ ನೀಡಿದ್ದಾನೆ. ಈ ಸಂಬಂಧಪಟ್ಟಂತೆ ಇದೀಗ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಶದ ಸರ್ವೋಚ್ಛ ನ್ಯಾಯಾಲಯ ತ್ರಿವಳಿ ತಲಾಖ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಕಾನೂನು ಉಲ್ಲಂಘಿಸಿದರೆ ಕಠಿಣ ಶಿಕ್ಷೆಯೂ ಇದೆ. ಕೆಲವು ವರ್ಷಗಳ ಹಿಂದೆ ಸುಳ್ಯದ ಜಯ ನಗರದಲ್ಲಿರುವ ನಿಸ್ರಿಯಾ ಎಂಬ ಮಹಿಳೆಯನ್ನು ಕೇರಳದ ತ್ರಿಶ್ಯೂರ್ ಮೂಲದ ಮೊಹಮ್ಮದ್ ರಾಶೀದ್ ಅನ್ನುವ ವ್ಯಕ್ತಿ ವಿವಾಹವಾಗಿದ್ದ. ದಂಪತಿಗೆ ಒಂದು ಮಗು ಜನಿಸಿತ್ತು. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾಗ ಹೆರಿಗೆಗಾಗಿ ನಿಸ್ರಿಯಾಳನ್ನು ರಾಶೀದ್ ಸುಳ್ಯದಲ್ಲಿರುವ ನಿಸ್ರಿಯಾ ತಾಯಿ ಮನೆಗೆ ಕರೆದುಕೊಂಡು ಬಿಡುತ್ತಾನೆ. ಅದೇನಾಯಿತೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅಬುಧಾಬಿಯಲ್ಲಿ ಕೆಲಸ ಮಾಡಿಕೊಂಡಿದ್ದ ರಾಶೀದ್ ವಾಟ್ಸಾಪ್ ನಲ್ಲೇ ಮೂರು ಸಲ ತಲಾಖ್ ಸಂದೇಶವನ್ನು ತನ್ನ ಪತ್ನಿ ನಿಸ್ರಿಯಾಗೆ ಕಳಿಸಿಕೊಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ತಕ್ಷಣ ಸುಳ್ಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ಮುಸ್ಲಿಂ ಪ್ರೊಟೆಕ್ಷನ್ ಆಫ್ ರೈಟ್ ಆಕ್ಟ್ 2019ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತ್ರಿವಳಿ ತಲಾಖ್ ಪದ್ಧತಿ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಣೆ.
ತ್ರಿವಳಿ ತಲಾಖ್ ಎನ್ನುವುದು ವಿಚ್ಛೇದನದ ಒಂದು ರೂಪವಾಗಿದೆ. ಮುಸ್ಲಿಂ ಪುರುಷನು ತಲಾಕ್ (ವಿಚ್ಛೇದನದ ಅರೇಬಿಕ್ ಪದ) ಅನ್ನು ಮೂರು ಬಾರಿ ಉಚ್ಚರಿಸುವ ಮೂಲಕ ತನ್ನ ಹೆಂಡತಿಯನ್ನು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಬಹುದಾಗಿತ್ತು.
22 ಆಗಸ್ಟ್ 2017 ರಂದು, ಭಾರತೀಯ ಸರ್ವೋಚ್ಚ ನ್ಯಾಯಾಲಯವು ತ್ವರಿತ ತ್ರಿವಳಿ ತಲಾಖ್ ( ತಲಾಕ್-ಎ-ಬಿದ್ದಾ ) ಅಸಂವಿಧಾನಿಕ ಎಂದು ಪರಿಗಣಿಸಿತು. ಪ್ಯಾನಲ್ನಲ್ಲಿರುವ 5 ನ್ಯಾಯಾಧೀಶರಲ್ಲಿ ಮೂವರು ತ್ರಿವಳಿ ತಲಾಖ್ ಪದ್ಧತಿಯು ಅಸಾಂವಿಧಾನಿಕ ಎಂದು ಒಪ್ಪಿಕೊಂಡರು. ಉಳಿದ ಇಬ್ಬರು ಆಚರಣೆಯನ್ನು ಸಂವಿಧಾನಬದ್ಧವೆಂದು ಘೋಷಿಸಿದರು. 30 ಜುಲೈ 2019 ರಂದು, ಭಾರತದ ಸಂಸತ್ತು ತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಿತು ಮತ್ತು 1 ಆಗಸ್ಟ್ 2019 ರಿಂದ ಶಿಕ್ಷಾರ್ಹ ಕಾಯ್ದೆಯನ್ನಾಗಿ ಮಾಡಿದೆ. ವಿಶ್ವದ 23 ದೇಶಗಳು ತ್ರಿವಳಿ ತಲಾಖ್ ಅನ್ನು ನಿಷೇಧಿಸಿವೆ.
Read More..