ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿದೆ ಕಂಬಳ
ಮಂಗಳೂರು: ರಾಜ್ಯದ ಪ್ರಸಿದ್ಧ ಜಾನಪದ ಕ್ರೀಡೆ “ಕಂಬಳ’ ನವೆಂಬರ್ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಕಂಬಳದ ಹಿರಿಮೆಯನ್ನು ರಾಜ್ಯ-ರಾಷ್ಟ್ರ ವ್ಯಾಪಿ ಪಸರಿಸುವ ಆಶಯದೊಂದಿಗೆ ರಾಜ್ಯ ರಾಜಧಾನಿ ಯಲ್ಲಿ ಬೆಂಗಳೂರು ತುಳುಕೂಟದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಕಂಬಳ ಆಯೋಜನೆಗೆ ನಿರ್ಧರಿಸಲಾಗಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಪೂರಕ ಸಿದ್ಧತೆಗಳು ನಡೆಯುತ್ತಿವೆ.
ಅರಮನೆ ಮೈದಾನದಲ್ಲಿ ಆಯೋಜನೆಗೆ ಮೈಸೂರು ರಾಜಮನೆತನದ ಅನುಮತಿಯೂ ಲಭಿಸಿದೆ.
ಕಂಬಳ ನಡೆಸಲು ಸ್ಥಳ ಪರಿಶೀಲನೆಯೂ ಮುಕ್ತಾಯ:
ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವ ಕುರಿತು ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯವಿಕ್ರಮ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕಂಬಳಕ್ಕಾಗಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಕಂಬಳ ಯಾವತ್ತು ನಡೆಯಲಿದೆ ಎನ್ನುವ ಕುರಿತು ಇನ್ನೂ ದಿನಾಂಕವನ್ನು ಮಾತ್ರ ನಿಗದಿ ಮಾಡಿಲ್ಲ. ಜೊತೆಗೆ, ಯಾವ ಕೋಣಗಳನ್ನು ಇಲ್ಲಿನ ಕಂಬಳಕ್ಕೆ ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ಬೆಂಗಳೂರಿಗೆ ಹೇಗೆ ತರಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಶಾಸಕ ಅಶೋಕ್ ಕುಮಾರ್ ರೈ ಅವರೊಂದಿಗೆ ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕೆ., ತುಳುಕೂಟದ ಗೌರವಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಕೆ.ವಿ., ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ ಬಿ., ಜಯರಾಮ್ ಸೂಡ, ಚಂದ್ರಹಾಸ ರೈ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಂಪತ್ ಕುಮಾರ್, ಅಕ್ಷಯ್ ರೈ ದಂಬೆಕಾನ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಕಂಬಳ ನಡೆಯುವ ಅರಮನೆ ಮೈದಾನದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.