ಗೃಹಪ್ರವೇಶಕ್ಕೆ ರಜೆ ನೀಡಿಲ್ಲವೆಂದು ಉಪ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಯುವತಿ !!
ಅಂತರಾಷ್ಟ್ರೀಯ ಕಾರ್ಯಕ್ರಮ ಮತ್ತು ಮನೆಯ ಗೃಹಪ್ರವೇಶಕ್ಕೆ ಹಾಜರಾಗಲು ರಜೆ ನೀಡದ ಕಾರಣ ಉಪ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಬೆಳಕಿಗೆ ಬಂದಿದೆ.
ನಿಶಾ ಬೇಂಗ್ರೆ ಮಧ್ಯಪ್ರದೇಶದ ಛತ್ತರ್ಪುರದಲ್ಲಿ ಡೆಪ್ಯೂಟಿ ಕಲೆಕ್ಟರ್(ಉಪ ಜಿಲ್ಲಾಧಿಕಾರಿ) ಆಗಿದ್ದರು. ಇವರು ಬೌದ್ಧ ಧರ್ಮಕ್ಕೆ ಸೇರಿದವರಾಗಿದ್ದಾರೆ. ಜೂನ್ 25 ರಂದು ಬೆತುಲ್ನ ಆಮ್ಲಾದಲ್ಲಿ ‘ಗಗನ್ ಮಲಿಕ್ ಫೌಂಡೇಶನ್’ ಆಶ್ರಯದಲ್ಲಿ, ಅಂತರರಾಷ್ಟ್ರೀಯ ಸರ್ವ ಧರ್ಮ ಶಾಂತಿ ಸಮ್ಮೇಳನ ಮತ್ತು ವಿಶ್ವ ಶಾಂತಿ ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು ತಮ್ಮ ಮನೆಯ ಗೃಹಪ್ರವೇಶವೆಂದು ಹೇಳಿ ನಿಶಾ ಬೇಂಗ್ರೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇವರಿಗೆ ರಜೆ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.ಅಧಿಕಾರಿ ನಿಶಾ ಬೇಂಗ್ರೆ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಅಂತರರಾಷ್ಟ್ರೀಯ ಸರ್ವ ಧರ್ಮ ಶಾಂತಿ ಸಮ್ಮೇಳನ ಮತ್ತು ವಿಶ್ವ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ರಜೆ ನಿರಾಕರಿಸಲಾಗಿದೆ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.